Tuesday, December 30, 2014

ಕೂತು ತಿಂದರೆ ಕುಡಿಕೆ ಹೊನ್ನೂ ಸಾಲದು

                                     ಕೂತು ತಿಂದರೆ ಕುಡಿಕೆ  ಹೊನ್ನೂ ಸಾಲದು

ಇದೊಂದು ಪ್ರಚಲಿತದಲ್ಲಿರುವ ನುಡಿಗಟ್ಟು . ಈಗ ಹೇಳುವ ಕಥೆ ಇದಕ್ಕೆ ಒಂದು ಉದಾಹರಣೆ .

ಒಂದೂರಲ್ಲಿ ಒಂದು ನವಿಲು ಇತ್ತು . ಅದರ ಮೈ ತುಂಬಾ ಗರಿಗಳು . ನವಿಲಿನ ಗರಿ ನೋಡಲು ಮೋಹಕ . ಇದರಿಂದಾಗಿ ತಾನು ಓರ್ವ ಸುಂದರ ಪಕ್ಷಿ ಎನ್ನುವ ಜಂಭವೂ ಅದಕ್ಕಿತ್ತು .

ಒಮ್ಮೆ ಅದು ಹುಳುಗಳಿಗಾಗಿ ( ತಿನ್ನಲು ) ಹುಡುಕುತ್ತಿರುವಾಗ ಓರ್ವ ಮನುಷ್ಯ ತನ್ನೊಂದಿಗೆ ಹುಳುಗಳಿರುವ ಬಕೀಟನ್ನು ಒಯ್ಯುವುದನ್ನು ನೋಡಿತು . ಒಮ್ಮೆಗೇ ಅಷ್ಟು ಹುಳುಗಳನ್ನು ನೋಡಿ ಅದಕ್ಕೆ ಬಾಯಿಯಲ್ಲಿ ನೀರೂರಿತು . ಬಾಯಿ ಚಪಲ ತಡೆಯಲಾರದೆ ಅದು ಮನುಷ್ಯನ ಬಳಿ ಹುಳುಗಳನ್ನು ತನಗೆ ಕೊಡುವಂತೆ ಕೇಳಿತು .

ಮನುಷ್ಯ ಅದಕ್ಕೊಪ್ಪದೆ ತಾನು ಅದನ್ನು ಮಾರಿ , ಹಣ ಪಡೆಯುವುದಾಗಿ ತಿಳಿಸಿದ . ನವಿಲು ಒಂದು ಕ್ಷಣ ಯೋಚಿಸಿ ತನಗೆ ಆ ಎಲ್ಲಾ ಹುಳುಗಳನ್ನು ನೀಡಿದರೆ , ಅದಕ್ಕೆ ಬದಲಾಗಿ ತನ್ನ ಒಂದು ವರ್ಣ ರಂಜಿತ ಗರಿ ಯನ್ನು ನೀಡುವುದಾಗಿಯೂ , ಅದನ್ನು ಮಾರಿ ಹಣ ಪಡೆಯಲು ತಿಳಿಸಿತು .

ಮನುಷ್ಯನಿಗೆ ಈ ಬದಲಾವಣೆ ಸರಿ ಎಂದೆನಿಸಿ ಆತ ಇದಕ್ಕೊಪ್ಪಿದ . ನವಿಲು ತನ್ನ ಒಂದು ಗರಿಯನ್ನು ಕಿತ್ತು ಮನುಷ್ಯನಿಗೆ ಕೊಟ್ಟು ಅವನಿಂದ ಹುಳುಗಳ ಬಕೀಟನ್ನು ತೆಗೆದುಕೊಂಡಿತು .

ಹೀಗೆ ಇದು ತುಂಬಾ ಸಮಯ ನಡೆಯಿತು . ನವಿಲು ಈಗ ಹುಳುಗಳನ್ನು ಹಿಡಿಯುವ ಕೆಲಸವನ್ನೇ ಮರೆತುಬಿಟ್ಟಿತು . ತಾನಿರುವ ಜಾಗಕ್ಕೇ ಆಹಾರ ಸಿಗುತ್ತಿರುವಾಗ ಅದಕ್ಕೇಕೆ ಆಹಾರ ಹುಡುಕುವ ಕಷ್ಟ?

ಆದರೆ ಒಂದು ದಿನ ಅದರ ಎಲ್ಲಾ ಗರಿಗಳು ಮುಗಿದುಹೋದವು . ಆದರೂ ಅದು ಮನುಷ್ಯನಿಗಾಗಿ ಕಾದು ಕುಳಿತಿತು . ಮನುಷ್ಯ ಬಂದು ಗರಿಯ ಬಗ್ಗೆ ಕೇಳಿದ . ನವಿಲು ಆರ್ತ ಸ್ವರದಲ್ಲಿ ತನ್ನ ಗರಿಗಳು ಮುಗಿದಿರುವುದಾಗಿಯೂ , ಹೊಸ ಗರಿಗಳು ಬೆಳೆದ ಕೂಡಲೇ ತಾನು ಕೊಡುವುದಾಗಿಯೂ , ಈಗ ತಿನ್ನಲು ಹುಳುಗಳನ್ನು ಕೊಡಬೇಕಾಗಿಯೂ ಕೇಳಿತು .

ಆದರೆ ಮನುಷ್ಯ ಅದಕ್ಕೊಪ್ಪದೆ ಕಟು ಶಬ್ದಗಳಲ್ಲಿ ಗರಿ ಕೊಟ್ಟರಷ್ಟೇ ಹುಳುಗಳನ್ನು ಕೊಡುವುದಾಗಿ ಹೇಳಿ ಅಲ್ಲಿಂದ ಹೋದ . ಇತ್ತ ನವಿಲು ಹಸಿವು ತಾಳಲಾರದೆ ಸತ್ತು ಹೋಯಿತು .

ನೀತಿ : ನಮ್ಮ ಬಳಿ ಕುಡಿಕೆ ಹೊನ್ನು ಇದ್ದರೂ ನಾವು ಅದನ್ನು ಪಡೆಯುವ ಮಾರ್ಗವನ್ನು ಮರೆಯಬಾರದು .