Wednesday, April 2, 2014

ಅಳಿಲು ಸೇವೆ

" ಅಳಿಲು ಸೇವೆ " ಎಂಬ ಶಬ್ದವನ್ನು ನಾನು ಕೇಳಿದ್ದೇನೆ . ಈಗ ಚುನಾವಣೆಯ ಸಮಯ ಆದ್ದರಿಂದ ಎಲ್ಲಾ ಅಬ್ಯರ್ಥಿಗಳ ಬಾಯಿಯಲ್ಲೂ " ನನ್ನ ಅಳಿಲು ಸೇವೆಗೆ ಅವಕಾಶ ಕೊಡಿ " ಎಂದೇ ಎಲ್ಲರ ಅಹವಾಲು. ಅಷ್ಟಕ್ಕೂ ಅಳಿಲು ಸೇವೆ ಎಂದರೆ ಏನು ?
ಅದು ರಾವಣನು ಸೀತೆಯನ್ನು ಲಂಕೆಗೆ ಕದ್ದೊಯ್ದ ಸಮಯ . ರಾಮನು ರಾವಣನನ್ನು ಯುಧ್ಧದಲ್ಲಿ ಸೋಲಿಸಿ ಸೀತೆಯನ್ನು ವಾಪಸ್ ಕರೆ ತರಲು ತನ್ನ ಕಪಿ ಸೈನ್ಯ ದ ಜೊತೆಗೂಡಿ ಹೊರಡುತ್ತಾನೆ .
ಆದರೆ ಲಂಕೆಯನ್ನು ತಲಪಲು ಅಗಾಧವಾದ ಸಮುದ್ರವನ್ನು ದಾಟಬೇಕು . ಕಪಿ ಸೈನ್ಯದ ಜೊತೆ ಹೇಗೆ ಸಾಗುವುದು ಎಂದು ಯೋಚಿಸುತ್ತಿರುವಾಗ ಹೊಳೆದದ್ದು ಸಮುದ್ರದಲ್ಲಿ ಸೇತುವೆಯನ್ನು ನಿರ್ಮಿಸುವುದು .
ಕಪಿಗಳು ದೊಡ್ಡ ಗಾತ್ರದ ಬಂಡೆ ಕಲ್ಲುಗಳನ್ನು ತಂದು ಸಮುದ್ರಕ್ಕೆ ಹಾಕಲು ಶುರು ಮಾಡಿದವು . ಈ ಬಂಡೆ ಕಲ್ಲುಗಳ ರಾಶಿಯ ಮೇಲೆ ನಡೆದು ಲಂಕೆಯನ್ನು ತಲಪುವುದು ಗುರಿಯಾಗಿತ್ತು .
ಅಲ್ಲಿಯೇ ಮರದಲ್ಲಿದ್ದ ಒಂದು ಅಳಿಲು ಇದನ್ನೆಲ್ಲಾ ನೋಡುತ್ತಿತ್ತು . ಅದು ಕೂಡ ರಾಮ ಭಕ್ತನೇ . ರಾಮನಿಗೆ ತನ್ನಿಂದಾದ ಸಹಾಯ ಮಾಡಬೇಕು ಎನ್ನುವುದು ಅದರ ಇಚ್ಛೆ .
ಆದರೆ ಕಪಿಗಳಂತೆ ಬಂಡೆ ಕಲ್ಲುಗಳನ್ನು ತರಲು ಅದಕ್ಕೆ ಸಾಧ್ಯವೇ ? ಆದರೂ ಸೇತುವೆಯನ್ನು ಕಟ್ಟುವ ಕಾರ್ಯದಲ್ಲಿ ತಾನೂ ಭಾಗಿಯಾಗಬೇಕು ಎನ್ನುವ ಹಂಬಲ ಅದಕ್ಕೆ .
ಅದು ಸಮುದ್ರದ ನೀರಿನಲ್ಲಿ ಮಿಂದು ತನ್ನ ಮೈಯನ್ನು ಒದ್ದೆ ಮಾಡಿಕೊಂಡಿತು . ನಂತರ ಆ ಒದ್ದೆ ಮೈಯಲ್ಲೇ ಸಮುದ್ರ ತೀರದ ಮರಳಿನಲ್ಲಿ ಹೊರಳಾಡಿತು .
ಆಗ ಅದರ ಮೈ ಮೇಲೆಲ್ಲಾ ಮರಳಿನ ಕಣಗಳು ಅಂಟಿ ಕೊಂಡವು . ನಂತರ ಕಪಿಗಳು ಬಂಡೆ ಕಲ್ಲು ಹಾಕುತ್ತಿದ್ದ ಸ್ಥಳಕ್ಕೆ ಹೋಗಿ ತನ್ನ ಮೈ ಕೊಡವುತಿತ್ತು .
ಹೀಗೆ ಅದರ ಮೈ ಮೇಲಿದ್ದ ಮರಳಿನ ಕಣಗಳು ಉದುರಿ ಬಂಡೆ ಕಲ್ಲಿನ ಮೇಲೆ ಬೀಳುತ್ತಿತ್ತು . ಹೀಗೆ ಮಾಡಿ ತಾನೂ ಸೇತುವೆ ನಿರ್ಮಾಣದಲ್ಲಿ ಸಹಾಯ ಮಾಡುತ್ತಿದ್ದೇನೆ ಎನ್ನುವ ಆತ್ಮ ತೃಪ್ತಿ ಅದಕ್ಕೆ .
ಹೀಗಾಗಿ ಸಣ್ಣ ಸಹಾಯವೇ ಆಗಿರಲಿ , ಪರರಿಗೆ ಉಪಕಾರಿಯಾಗಬೇಕು ಎನ್ನುವ ಹಂಬಲವೇ " ಅಳಿಲು ಸೇವೆ " ಎಂಬ ಶಬ್ದದ ಅರ್ಥ .