Monday, January 17, 2011

ಮೋಹ ಮುಕ್ತರು

                                               ಮೋಹ ಮುಕ್ತರು
ವಿವೇಕಾನಂದ ಅವರು ಪರಿವ್ರಾಜಕರು.ಅಂದರೆ ತಾವು ನಂಬಿದ ಸಿದ್ಧಾಂತವನ್ನು ಲೋಕದೆಲ್ಲೆಡೆ ಅನವರತ ಪ್ರಚಾರ ಮಾಡುವುದು.ಹೀಗೆ ಒಮ್ಮೆ ವಿವೇಕಾನಂದರು ಪರ್ಯಟನೆ ಮಾಡುತ್ತಾ ರಾಜ ಅಜಿತ್ ಸಿಂಗ್ ನ ರಾಜ್ಯಕ್ಕೆ ಬರುತ್ತಾರೆ.ವಿವೇಕಾನಂದರ ಆಗಮನದ ಸುದ್ದಿ ತಿಳಿಯುತ್ತಲೇ ರಾಜ ಅಭ್ಯಾಸಬಲದಂತೆ ಅವರಿಗಾಗಿ ಸುಂದರ ಮಹಿಳೆಯರಿಂದ ಸಂಗೀತ ಮತ್ತು ನೃತ್ಯದ ಏರ್ಪಾಟು ಮಾಡುತ್ತಾನೆ.ಇದು ವಿವೇಕಾನಂದರಿಗೆ ತಿಳಿಯುತ್ತದೆ.
ಆದರೆ ಅವರಿಗೆ ತುಂಬಾ ಬೇಜಾರಾಗುತ್ತದೆ.ತಾನು ಓರ್ವ ಸನ್ಯಾಸಿ ಎಂದು ತಿಳಿದಿದ್ದರೂ ರಾಜ ಈ ಏರ್ಪಾಟು ಮಾಡಿರುವುದು ಅವರಿಗೆ ಬೇಸರ ಉಂಟುಮಾಡುತ್ತದೆ.ಅವರು ಕೋಣೆಗೆ ಹೋಗಿ ಬಾಗಿಲು ಹಾಕಿಕೊಂಡು ಕುಳಿತುಬಿಡುತ್ತಾರೆ.ಅತ್ತ ರಾಜನಿಗೂ ತನ್ನ ತಪ್ಪಿನ ಅರಿವಾಗುತ್ತದೆ.
ಆದರೇನು ಮಾಡುವುದು?ಏರ್ಪಾಟು ಮಾಡಿ ಆಗಿದೆ.ಆಗ ಸಂಗೀತ ಹಾಡಲೆಂದು ನಿಯೋಜಿತಳಾದ ಮಹಿಳೆಗೆ ಇದು ತಿಳಿದು ಆಕೆಗೆ ತುಂಬಾ ಬೇಸರವಾಗುತ್ತದೆ.ಆಗ ಆಕೆ ಅಲ್ಲಿಯೇ ಒಂದು ಹಾಡು ಹೇಳಲಾರಂಭಿಸುತ್ತಾಳೆ.ಅದರ ಅರ್ಥ ಇಷ್ಟೇ "ತಾಯಿ ಮಗುವನ್ನು ನೋಡಲು ಬರುವುದು ತಪ್ಪೇ?ಭಕ್ತ ಭಗವಂತನನ್ನು ಕಾಣಲು ಬಯಸುವುದು ತಪ್ಪೇ?"ಎನ್ನುವುದು.ಈ ಹಾಡು ಕೋಣೆಯಲ್ಲಿ ಕುಳಿತ್ತಿದ್ದ ವಿವೇಕಾನಂದರಿಗೆ ಕೇಳುತ್ತದೆ.
ಆಗ ಅವರು ಆತ್ಮ ವಿಮರ್ಶೆ ಮಾಡಿಕೊಳ್ಳುತ್ತಾರೆ.ತಾನೇಕೆ ಹಾಗೆ ಮಾಡಿದೆ?ತಾನು ನಿಜವಾಗಲೂ ಮೋಹಮುಕ್ತನೆ ಆಗಿದ್ದಲ್ಲಿ ಹಾಡು ಕೇಳಲು ಹಿಂಜರಿಕೆ ಏಕೆ? ಎಂದು ಯೋಚಿಸಿದ ವಿವೇಕಾನಂದರು ಕೂಡಲೇ ಕೋಣೆಯ ಬಾಗಿಲು ತೆಗೆದು ಹೊರಗೆ ಬಂದು ಆ ಮಹಿಳೆಯ ಬಳಿ ಕುಳಿತು ಹಾಡು ಕೇಳುತ್ತಾರೆ.ಮತ್ತು ತಾನು ನಿಜವಾಗಲೂ ಮೋಹಮುಕ್ತ ಎಂದು ಸಾಬೀತು ಪಡಿಸುತ್ತಾರೆ.

No comments:

Post a Comment