Thursday, February 10, 2011

ಸಂಕಲ್ಪದ ಶಕ್ತಿ

                                   ಸಂಕಲ್ಪದ ಶಕ್ತಿ
ಬಹಳ ಹಿಂದೆ ಕೋಸಲ ದೇಶದ ರಾಜನಿಗೆ ತನಗೆ ಇನ್ನೂ ಸಂತಾನವಾಗಿಲ್ಲ ಎಂದು ಬಹಳ ಚಿಂತೆಯಾಗಿತ್ತು.ತನ್ನ ನಂತರ ರಾಜ್ಯವು ಪರರ ಕೈಗೆ ಸೇರಿ ಅಧೋಗತಿಯನ್ನು ಹೊಂದುತ್ತದೆ ಎಂಬುದು ಆತನ ಕೊರಗಾಗಿತ್ತು.ಆತ ಮಾಡದ ವೃತಗಳಿಲ್ಲ ಮತ್ತು ಮಾಡದ ಪೂಜೆಗಳಿಲ್ಲ. ಆದರೂ ಫಲಿತಾಂಶ ಶೂನ್ಯ.
ಹೀಗಿರಲು ತನ್ನ ರಾಜ್ಯಕ್ಕೆ ಓರ್ವ ಮಹಿಮೆಯುಳ್ಳ ತಪಸ್ವಿ ಬಂದಿರುವ ಸಮಾಚಾರ ರಾಜನಿಗೆ ತಿಳಿಯುತ್ತದೆ.ಅವರು ತಮ್ಮ ಮಹಿಮೆಯಿಂದ ಜನರ ಕಷ್ಟಗಳನ್ನು ದೂರ ಮಾಡಬಲ್ಲರು ಎನ್ನುವುದೂ ತಿಳಿಯುತ್ತದೆ.ಹೇಗಾದರೂ ಮಾಡಿ ಅವರ ಜೊತೆ ತನ್ನ ಸಮಸ್ಯೆಯ ಬಗ್ಗೆ ಮಾತನಾಡಬೇಕೆಂದು ರಾಜ ನಿರ್ಧರಿಸುತ್ತಾನೆ.
ಅಂತೆಯೇ ಒಂದು ದಿನಾ ಆತ ರಾಣಿಯ ಜೊತೆಗೂಡಿ ತಪಸ್ವಿಯ ಬಳಿ ಬಂದು ತನ್ನ ಸಮಸ್ಯೆಯನ್ನು ಹೇಳಿಕೊಳ್ಳುತ್ತಾನೆ.ಆದರೆ ತಪಸ್ವಿ ಇದು ತನ್ನಿಂದ ಆಗದು ಎಂದು ಹೇಳಿ ಬಿಡುತ್ತಾನೆ.ಆದರೆ ರಾಜ ಪಟ್ಟು ಬಿಡದೆ ಒತ್ತಾಯಿಸಲಾರಂಭಿಸಿದಾಗ ಕೊನೆಗೆ ತಪಸ್ವಿ ಒಪ್ಪಿಕೊಂಡು ಒಂದು ಕಾಗದದಲ್ಲಿ ಎನೋ ಬರೆದು,ಅದನ್ನು ಒಂದು ತಾಯಿತಕ್ಕೆ ಕಟ್ಟಿ ಅದನ್ನು ರಾಣಿಯ ಕೈಗೆ ಕಟ್ಟುತ್ತಾನೆ.ಅವರಿಗೆ ಒಳ್ಳೆಯದಾಗಲಿ ಎಂದು ಹರಸಿ ಕಳುಹಿಸುತ್ತಾನೆ.
ಹೀಗೆ ಹೋದ ರಾಜ ಹೊಸ ಹುಮ್ಮಸ್ಸಿನಿಂದ ರಾಜ್ಯಭಾರ ಮಾಡಲಾರಂಭಿಸಿದ.ಎಲ್ಲರೊಂದಿಗೂ ನಗುತ್ತಲೇ ವ್ಯವಹರಿಸುತ್ತಿದ್ದ.ಹೀಗಿರುವಾಗ ರಾಣಿ ಗರ್ಭಿಣಿಯಾದಳು.ರಾಜನ ಸಂತಸಕ್ಕೆ ಪಾರವೇ ಇಲ್ಲ.ಆತ ಸಮಸ್ತ ಪ್ರಜೆಗಳಿಗೂ ಉಡುಗೊರೆಯನ್ನು ನೀಡಿದ.ಒಂದು ಶುಭಕಾಲದಲ್ಲಿ ರಾಣಿ ಗಂಡು ಮಗುವಿಗೆ ಜನ್ಮವಿತ್ತಳು.
ಇದಕ್ಕೆಲ್ಲ ಕಾರಣನಾದ ತಪಸ್ವಿಗೆ ವಂದಿಸಲು ರಾಜ ತಪಸ್ವಿಯ ಬಳಿ ಹೋದ.ಆಗ ತಪಸ್ವಿ ರಾಣಿಯ ಕೈಗೆ ಕಟ್ಟಿದ ತಾಯಿತವನ್ನು ಬಿಚ್ಚಿ ನೋಡಲು ತಿಳಿಸಿದ.ಅಂತೆಯೇ ರಾಜ ಮಾಡಲು,ತಾಯಿತದಲ್ಲಿ ಇಟ್ಟಿದ್ದ ಕಾಗದದಲ್ಲಿ ಏನೂ ಇರಲಿಲ್ಲ.ಇದು ರಾಜನ ಆಶ್ಚರ್ಯಕ್ಕೆ ಕಾರಣವಾಯಿತು,ಆಗ ತಪಸ್ವಿ ನಾವು ಮನದಲ್ಲಿ ಏನು ಬೇಕೆಂದು ಚಿಂತನ ಮಾಡುತ್ತೇವೆಯೋ.ನಮ್ಮ ದೇಹ ಅದಕ್ಕೆ ತಕ್ಕಂತೆ ವರ್ತಿಸುತ್ತದೆ. ಹೀಗಿರಲು ಇದರಲ್ಲಿ ನನ್ನ ಪಾತ್ರವೇನು ಇಲ್ಲ.ಎಂದು ತಿಳಿಸಿದ.
ನೀತಿ:ಸಕಾರಾತ್ಮಕ ಚಿಂತನೆಯನ್ನೇ  ಮಾಡಬೇಕು.

No comments:

Post a Comment