Wednesday, March 9, 2011

ಕಬಂಧ

                                                 ಕಬಂಧ
ಹಿಂದೆ ವಿಶ್ವಾವಸು ಎಂಬ ಗಂಧರ್ವ ಇದ್ದನು.ಆತ ಒಮ್ಮೆ ಬ್ರಹ್ಮನನ್ನು ಕುರಿತು ತಪಸ್ಸು ಮಾಡಿ ಅಮರತ್ವದ ವರವನ್ನು ಪಡೆದುಕೊಂಡನು.ಹೀಗೆ ತಾನು ಪಡೆದ ವರದ ಪ್ರಭಾವದಿಂದ ಹಾಗೂ ಇನ್ನು ತನ್ನನ್ನು ಯಾರೂ ಸೋಲಿಸಲಾರರು ಎಂಬ ಅಹಂಭಾವದಿಂದ ಮದೋನ್ಮತ್ತನಾದ ವಿಶ್ವಾವಸು ಇಂದ್ರನ ಮೇಲೆಯೇ ಯುದ್ಧಕ್ಕೆ ಬರುತ್ತಾನೆ.ಇದರಿಂದ ಕೋಪಗೊಂಡ ಇಂದ್ರ ತನ್ನ ವಜ್ರಾಯುಧದಿಂದ ವಿಶ್ವಾವಸುವಿನ ತಲೆ ಯನ್ನು ಆತನ ಶರೀರಕ್ಕೆ ಬರುವಂತೆ ಮಾಡುತ್ತಾನೆ.ಈಗ ವಿಶ್ವಾವಸು ಒಂದು ಕಣ್ಣು,೨ ಉದ್ದನೆಯ ಕೈಗಳು ಮತ್ತು ಶರೀರದಲ್ಲಿರುವ ತಲೆ ಇವುಗಳಿಂದಾಗಿ ಭಯಂಕರವಾಗಿ ಕಾಣುತ್ತಿರುತ್ತಾನೆ.
ಆಗ ಬುದ್ಧಿ ಬಂದ ವಿಶ್ವಾವಸು ತನಗೆ ಶಾಪವಿಮೋಚನೆ ಮಾಡಬೇಕೆಂದು ಇಂದ್ರನ ಬಳಿ ಬೇಡಿಕೊಂಡಾಗ ಇಂದ್ರ ಯಾವಾಗ ರಾಮನು ಆತನ ಉದ್ದವಾದ ಕೈಗಳನ್ನು ಕತ್ತರಿಸುತ್ತಾನೋ,ಆಗ ಅವನಿಗೆ ಶಾಪ ವಿಮೋಚನೆ ಆಗುವುದೆಂದು ತಿಳಿಸುತ್ತಾನೆ.ಇದಾದ ನಂತರ ಕಬಂಧ ಅರಣ್ಯಕ್ಕೆ ತೆರಳಿ ಅಲ್ಲಿ ರಾಮನ ಆಗಮನಕ್ಕೆ ಕಾಯುತ್ತಿರುತ್ತಾನೆ.ಆದರೆ ತನ್ನ ಹಿಂಸಾ ಪ್ರವೃತ್ತಿ ಅನ್ನು ಬಿಡಲಾಗದೆ ಅಲ್ಲಿದ್ದ ಸಾಧು-ಸಂತರನ್ನು ಹೆದರಿಸುತ್ತಿರುತ್ತಾನೆ.
ಹೀಗೆ ಕಾಲ ಉರುಳಿ ರಾವಣ ಸೀತೆಯನ್ನು ಅಪಹರಿಸುತ್ತಾನೆ.ರಾಮ ಸೀತೆಯನ್ನು ಹುಡುಕಿಕೊಂಡು ಕಬಂಧ ಇರುವ ಅರಣ್ಯಕ್ಕೆ ಬರುತ್ತಾನೆ.ಆದರೆ ಕಬಂಧನಿಗೆ ರಾಮನ ಪರಿಚಯವಿಲ್ಲ.ತನಗೆ ತಿನ್ನಲು ಆಹಾರ ಸಿಕ್ಕಿತೆಂದು ಸಂತಸಗೊಂಡ ಕಬಂಧ ಒಂದು ಕೈಯಲ್ಲಿ ರಾಮನನ್ನೂ,ಇನ್ನೊಂದು ಕೈಯಲ್ಲಿ ಲಕ್ಷ್ಮಣನನ್ನೂ ಹಿಡಿದುಕೊಳ್ಳುತ್ತಾನೆ.ಆತನ ಹಿಡಿತದಿಂದ ತಪ್ಪಿಸಿಕೊಳ್ಳಲು ರಾಮ-ಲಕ್ಷ್ಮಣರು ಬಹಳ ಹೆಣಗಾಡುತ್ತಾರೆ
ಕೊನೆಗೆ ರಾಮ ಕಬಂಧನ ಎರಡೂ ಕೈಗಳನ್ನು ಕತ್ತರಿಸುತ್ತಾನೆ.ಆಗ ಕಬಂಧ ಅವರಾರೆಂದು ಪ್ರಶ್ನಿಸಲು ತಾವು ರಾಮ-ಲಕ್ಷ್ಮಣ ರು ಎಂದು ಉತ್ತರಿಸಲು ಕಬಂಧನ ಶಾಪ ವಿಮೋಚನೆ ಆಗುತ್ತದೆ.ನಂತರ ಕಬಂಧ ರಾಮನಿಗೆ ಅಲ್ಲೇ ಅಡಗಿಕೊಂಡಿದ್ದ ಸುಗ್ರೀವನ ಬಗ್ಗೆ ತಿಳಿಸಿ,ಆತನ ಸಹಾಯದಿಂದ ಸೀತೆಯನ್ನು ಹುಡುಕಲು ತಿಳಿಸುತ್ತಾನೆ.ಹೀಗೆ ಭದ್ರವಾದ ಹಿಡಿತ ಹೊಂದಿರುವವರಿಗೆ ಕಬಂಧ ಬಾಹು ಎಂಬ ಹೆಸರು ಬಂತು.

No comments:

Post a Comment