Friday, December 24, 2010

ಪರೋಪಕಾರದಿಂದ ಒಳಿತು

                                         ಪರೋಪಕಾರದಿಂದ ಒಳಿತು 
ಒಂದು ಊರು.ಅಲ್ಲಿ ಒಂದು ದೇವಸ್ಥಾನ.ಅಲ್ಲಿ ಬರುವ ಭಕ್ತರೆಲ್ಲರೂ ಸ್ಥಿತಿವಂತರೆ.ಅಲ್ಲಿ ಒಬ್ಬ ಹುಡುಗ ಹೂವು ಮಾರುತ್ತಿದ್ದ.ಆತ ದೇವಸ್ಥಾನಕ್ಕೆಂದು ಬರುವ ಭಕ್ತರೆಲ್ಲರ ಬಳಿ ಅವರ ಬಳಿ ಹೋಗಿ ತನ್ನ ಹೂವು ಕೊಂಡುಕೊಳ್ಳುವಂತೆ ಪೀಡಿಸುತ್ತಿದ್ದ.ಇದರಿಂದ ಅಲ್ಲಿಗೆ ದೇವರ ದರ್ಶನಕ್ಕೆಂದು ಬರುತ್ತಿದ್ದ ಭಕ್ತರಿಗೆಲ್ಲಾ ಕಿರಿಕಿರಿಯಾಗುತ್ತಿತ್ತು.ಹೂವು ಕೊಳ್ಳುವವರೆಗೆ ಹುಡುಗ ಬಿಡುತ್ತಿರಲಿಲ್ಲ.ಹೀಗಿರಲು ಒಂದು ದಿನಾ ಓರ್ವ ಮಹಿಳೆ ದೇವಸ್ಥಾನಕ್ಕೆ ಬಂದರು.ಹುಡುಗ ಯಥಾ ಪ್ರಕಾರ ಅವರ ಬಳಿ ತೆರಳಿ ತನ್ನ ಹೂವು  ಕೊಳ್ಳುವಂತೆ ಪೀಡಿಸಲಾರಂಭಿಸಿದ.ಇದರಿಂದ ಸಿಟ್ಟಿಗೆದ್ದ ಮಹಿಳೆ ಅವನನ್ನು ಬೈದು ಅಟ್ಟಿದರು.
ಮಹಿಳೆ ನಂತರ ಸುಮಾರು ದಿನದ ಮೇಲೆ ದೇವಸ್ಥಾನಕ್ಕೆ  ಮತ್ತೆ ಬಂದರು.ಆಗ ಕೂಡ ಆ ಹುಡುಗ ಅಲ್ಲಿದ್ದ.ಆದರೆ ಆತ ಹೂವಿನ   ಬುಟ್ಟಿಯೊಂದಿಗೆ ಒಂದು ಮೂಲೆಯಲ್ಲಿ ಕುಳಿತ್ತಿದ್ದ.ತನ್ನ ಬಳಿ ಬಂದು ಹೂವು ಕೇಳಿದವರಿಗೆ ಮಾತ್ರ ಹೂವು ನೀಡುತ್ತಿದ್ದ.ಇದರಿಂದ ಮಹಿಳೆಗೆ ಸೋಜಿಗವಾಯಿತು.ತಾನು ಆವತ್ತು ಬೈದ ಕಾರಣ ಹುಡುಗ ಸುಧಾರಿಸಿದ್ದಾನೆ ಎಂದೂ ಅವರಿಗೆ ಅನಿಸಿತು.ಅವರು ಹುಡುಗನ ಬಳಿ ತೆರಳಿ ಆತನ ವರ್ತನೆಯ ಕಾರಣ ಕೇಳಿದರು.
ಆಗ ಹುಡುಗ "ತನ್ನ ಮನೆಯಲ್ಲಿ ತಾನೂ,ತನ್ನ ತಾಯಿ ಮತ್ತು ತಂಗಿ ವಾಸಿಸುತ್ತಿದ್ದೆವು.ಆದರೆ ತಂಗಿಗೆ ಕ್ಯಾನ್ಸರ್  ಖಾಯಿಲೆ ಆಯ್ತು.ತಂದೆ ಇಲ್ಲದ ಕಾರಣ ತಾನೇ ತಂಗಿಯ ಶುಶ್ರೂಷೆಯ ಜವಾಬ್ದಾರಿ ಹೊರಬೇಕಾಯಿತು.ಆದರೆ ಈಗ್ಗೆ ೪ ದಿನದ ಹಿಂದೆ ನನ್ನ ತಂಗಿ ತೀರಿಹೋದಳು.ಅವಳೇ ಇಲ್ಲದ ಮೇಲೆ ನಾನು ಇನ್ನಾರಿಗೊಸ್ಕರ ಹಣ ಒಟ್ಟು ಮಾಡಲಿ?ಆದರಿಂದ ಬಂದಷ್ಟು ಬರಲಿ ಎಂದು ಮೂಲೆಯಲಿ ಕುಳಿತ್ತಿದ್ದೇನೆ" ಎಂದು ತಿಳಿಸಿದ.
ಇದನ್ನು ಕೇಳಿದ ಮಹಿಳೆಗೆ ತನ್ನ ಮೇಲೆ ತಿರಸ್ಕಾರ ಉಂಟಾಯಿತು.ಒಂದು ೧೦ ರುಪಾಯಿಯ ಹೂವನ್ನು ಹುಡುಗನ ಬಳಿ ಕೊಂಡಿದ್ದರೆ ತನ್ನ ಶ್ರೀಮಂತಿಕೆಗೆ ಏನೂ ಕುಂದು ಬರುತ್ತಿರಲಿಲ್ಲ.ಆದರೆ ತನ್ನ ನಿರಾಕರಣೆಯಿಂದ ಒಂದು ಜೀವ ಅನ್ಯಾಯವಾಗಿ ಸಾಯಬೇಕಾಯಿತು ಎಂದು ತಿಳಿದ ಮಹಿಳೆ ಹುಡುಗನ ವಿದ್ಯಾಭಾಸದ ಖರ್ಚು ಮತ್ತು ಆತನ ಕುಟುಂಬದ ಜವಾಬ್ದಾರಿಯನ್ನು ಹೊತ್ತುಕೊಂಡಳು.
ನೀತಿ: ನಮ್ಮ ಕೈಯಲ್ಲಿ ಆಗುವುದಾದರೆ ಪರರಿಗೆ ಸಹಾಯ ಮಾಡಬೇಕು.

No comments:

Post a Comment